ಮಕ್ಕಳ ದಿನಾಚರಣೆ

ಓದಿರಿ ಮನವಿರಿಸಿ
~~~~~~~~~

ಹೊಕ್ಕಳು ಬಳ್ಳಿಯೆ ಆಗಿಹ ನಮ್ಮಯ
ಮಕ್ಕಳ ದಿನವನು ನೆನೆಯುವೆನು|
ಚಿಕ್ಕವನಾಗುತ ಚಿಣ್ಣರ ಜೊತೆಯಲಿ 
ಸಕ್ಕರೆ ಲಾವಣಿ ಪಾಡುವೆನು||ಪ||

ನಮ್ಮಯ ನಾಡಿನ ಇಂದಿನ ಮಕ್ಕಳ
ಹೆಮ್ಮೆಯ ಹಬ್ಬದ ವಿಷಯವಿದು|
ಹೊಮ್ಮಲು ಮುನ್ನಡೆ ವಿದ್ಯೆಯ ಜೊತೆಯಲಿ
ಕಮ್ಮವ ಕಲಿಯಿರಿ ನೀವಿಂದು||೧||

ದೇಶದ ಏಳಿಗೆ ಮನದಲಿ ತುಂಬುವ 
ವೇಷವ ಧರಿಸುವ ನೀವೆಲ್ಲಾ|
ಆಸರೆ ನೀಡಿದ ಹಿರಿಯರ ಮರೆಯದೆ 
ಪೋಷಣೆ ಮಾಡಿರಿ ಬಾಳೆಲ್ಲಾ||೨|| 

ಅರಿಯುವ ಸಮಯದಿ ಸಕಲವು ತಿಳಿವುದು
ಮೆರೆಯಲು ಅವಸರ ಮಾಡದಿರಿ|
ಪರಪರಿಯಾಸೆಗೆ ಮನವನು ಬಿಡದೆಲೆ
ಪರಿಸರ ರಕ್ಷಣೆ ಮಾಡುತಿರಿ||೩||

ಕಣ್ಣಿಗೆ ಕಾಣುವ ಸತ್ಯವದೆಲ್ಲವು
ಬೆಣ್ಣೆಯ ಹಾಗೇ ಜಾರುವುದು|
ಸುಣ್ಣದ ನೀರಿನ ತಣ್ಣನೆ ಹಾಲಿನ 
ಬಣ್ಣದ ಪರಿಚಯವಾಗುವುದು||೪||

ಆಸೆಯ ಭರಿಸುವ ಭರದಲಿಯೆಂದಿಗು
ಮೋಸವ ಮಾಡದೆ ಬಾಳುತಿರಿ|
ಮೀಸೆಯು ಮೊಳೆಯುವ ವೇಳೆಗೆ ಹಾದಿಯ
ದೋಷಗಳರಿವನು ತಿಳಿಯುವಿರಿ||೫||

ದೇಶವ ಸುತ್ತುತ ಬದುಕಿನ ಬಹುವಿಧ
ವೇಷವ ನೋಡಲು ಕಾತರಿಸಿ|
ಭಾಷೆಯನರಿಯುವ ತವಕವ ತೋರುತ
ಕೋಶವನೋದಿರಿ ಮನವಿರಿಸಿ||೬||

ಪಶಿವೈ ಪಿಎಸ್ ವೈಲೇಶ ಕೊಡಗು
೧೪/೧೧/೨೦೧೯


Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು